ಅವಳು ಆರುಶಿ, ೧೪ ವಯಸ್ಸಿನ ಮುದ್ದು ಹುಡುಗಿ. ನೋಯಿಡಾದಾಕೆ.ಅಪ್ಪ ಅಮ್ಮ ಇಬ್ಬರೂ ವೈದ್ಯರು. ಶ್ರೀಮಂತ ಕುಟುಂಬ. ಮೇ ಹದಿನೈದರ ರಾತ್ರಿ -ಹದಿನಾರರ ಬೆಳಗಿನ ಜಾವ ತನ್ನ ಮನೆಯ, ತನ್ನ ಬೆಡ್ ರೂಮಿನಲ್ಲಿ ಕೊಲೆಯಾಗಿ ಬಿದ್ದಿದ್ದಳು. ಕುತ್ತಿಗೆ ಸೀಳಿತ್ತು. ಮನೆ ಕೆಲಸದಾತ ನಾಪತ್ತೆ. ಪೋಲೀಸ್ ಆತನ ಬೆನ್ನು ಬಿದ್ದಿತ್ತು- ನೇಪಾಳಕ್ಕೂ ಒಂದು ಟೀಮು ಹೋಯಿತು. ಮತ್ತೆ ನೋಡಿದರೆ ಆ ಕೆಲಸದಾಳು ಹೇಮರಾಜ, (ನಲವತ್ತೈದು ವಯಸ್ಸು!) ಅವರದೇ ಮನೆಯ ತಾರಸಿಯ ಮೇಲೆ ಕೊಲೆಯಾಗಿ ಬಿದ್ದಿದ್ದ, ಆರುಶಿ ಸತ್ತ ತರಹವೇ. ಎಲೆಕ್ಟ್ರಾನಿಕ್ ಮಾಧ್ಯಮಗಳಂತೂ "ತಲ್ವಾರ್" ಮನೆ ಮುಂದೆ ತಮ್ಮ ಓಬಿ ವ್ಯಾನು ಹಾಕಿಕೊಂಡು ನಿಂತುಬಿಟ್ಟವು. ನಿಗೂಢ ಕೊಲೆ ಪ್ರಕರಣ ಅಂತ ಬಹಳ ಸುದ್ದಿಯಾಯಿತು.
ಆಕೆಗೊಂದು ಸ್ವಂತ ಮೊಬೈಲಿತ್ತು, ಅದರಲ್ಲಿ ಆಕೆ ಯಾರಿಗೋ ನೂರಾರು ಮೆಸೇಜು- ಕಾಲು ಮಾಡಿದ್ದಳು. ಆ ಹುಡುಗನ ವಿಚಾರಣೆಯಾಯಿತು, ಸತ್ತುಹೋದ ಕೆಲಸದಾಳು ಹೇಮರಾಜನ ನಾಲ್ವರು ಸಹಚರರನ್ನೂ ಕರೆಸಿ ವಿಚಾರಣೆ ಮಾಡಿತು ನೋಯಿಡಾ ಪೋಲೀಸ್. ಉಹುಂ, ಪ್ರಯೋಜನವಾಗಲಿಲ್ಲ. ನಿನ್ನೆ ಅಂತೂ ಇಂತೂ ಪ್ರಕರಣ ಭೇದಿಸಲ್ಪಟ್ಟಿತು.
ನಿನ್ನೆ ಮೇ ೨೪ರಂದು ಆರುಶಿಯ ಅಪ್ಪ ಡಾ.ರಾಜೇಶ್ ತಲ್ವಾರ್ ನನ್ನು ಬಂಧಿಸಲಾಗಿದೆ- ಮಗಳ ಕೊಲೆ ಮಾಡಿದ್ದಕ್ಕಾಗಿ. ಮಗಳು ಮತ್ತು ಕೆಲಸದಾಳನ್ನ ನೋಡಬಾರದ ಪರಿಸ್ಥಿತಿಯಲ್ಲಿ ನೋಡಿದೆ, ಮೊದಲು ಕೆಲಸದಾಳನ್ನು ಕೊಂದೆ, ಆಮೇಲೆ ಸ್ವಲ ಕುಡಿದು, ಬೆಡ್ರೂಮಿಗೆ ನುಗ್ಗಿ ಅವಳನ್ನೂ ಕೊಂದೆ ಅನ್ನುತ್ತಾನೆ ಆತ. ಆದರೆ ಆತನಿಗೇ ಅನೈತಿಕ ಸಂಬಂಧವಿತ್ತು. ಅದು ಮಗಳಿಗೆ ತಿಳಿದಿತ್ತು ಮತ್ತು ಆಕೆಗೆ ಆ ಬಗ್ಗೆ ಬೇಸರವಿತ್ತು, ಆವತ್ತು ರಾತ್ರಿ ಏನೋ ಗಲಾಟೆಯಾಗಿದೆ -ಅದಕ್ಕೇ ಮಗಳನ್ನು ಕೊಂದಿದ್ದಾನೆ ಅನ್ನುತ್ತದೆ ಮತ್ತೊಂದು ಮೂಲ.
ಗಂಡ ಹೆಂಡತಿ ನಡುವಣ ಸಂಬಂಧ ಸರಿಯಿರಲಿಲ್ಲ. ಇಬ್ಬರೂ ಜೊತೆಯಲ್ಲಿರುತ್ತಿರಲಿಲ್ಲ. ಆರುಶಿಗೆ ತನ್ನ ನಲಿವನ್ನ- ನೋವನ್ನ ಹಂಚಿಕೊಳ್ಳೋಕೆ ಮನೆಯಲ್ಲಿ ಕೆಲಸದಾಳನ್ನು ಬಿಟ್ಟು ಬೇರಾರೂ ಇರಲಿಲ್ಲ...
ಆ ಹುಡುಗಿ ತಪ್ಪು ಮಾಡಿರಲಾರಳು ಅನ್ನಿಸುತ್ತದೆ ನನಗೆ, ಅಥವ ತಪ್ಪು ಮಾಡಿದ್ದರೂ ಅವಳು ಕಾರಣವಲ್ಲ ಅದಕ್ಕೆ? ತುಂಬು ಬದುಕು ಬಾಳಬೇಕಿದ್ದ ಜೀವ, ಅವಳಪ್ಪನದೇ ಕೈಯಲ್ಲಿ. .
ಯಾಕೆ ಹೀಗೆ?
Saturday, May 24, 2008
ಆರುಶಿ...
Wednesday, May 14, 2008
ಹೇರೂರು ತೇರಿಗೆ ನಾನೂ ಹೋದೆ!
ವಿಷ್ಯ ಅಂತಂದ್ರೆ,ನಾನು ಮೊನ್ನೆ ಮೊನ್ನೆ ಹೇರೂರು ತೇರಿಗೆ ಹೋಗಿದ್ದೆ. ಮತ್ತು, ಹೇರೂರು ತೇರಿಗೆ ಹೋದಾಗ ಏನು ಮಾಡಲೇ (ಆಡಲೇ)ಬೇಕೋ ಅದನ್ನ ಮಾಡಿ(ಆಡಿ) ಬಂದೆ.
Thursday, May 01, 2008
ಏನನ್ನುತ್ತೀರಿ ಇದಕ್ಕೆ?
ಯಡಿಯೂರಪ್ಪ ಸಾರಥ್ಯದ ಬಿಜೆಪಿ ಗವರ್ಮೆಂಟು ಬಿದ್ದು ಹೋಗಿ ಸ್ವಲ್ಪ ದಿನಕ್ಕೇ ಆ ಪಕ್ಷ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಮಾಡಿತು. ಎಲ್ಲೆಂಲ್ಲಿಂದಲೋ ಬಂದ ಬಾಡಿಗೆ ಭಂಟರು ಕಾರ್ಪೋರೇಷನ್ನು, ಕಬ್ಬನ್ ಪಾರ್ಕು ತುಂಬಿಕೊಂಡು ಗಲಭೆ ಎಬ್ಬಿಸಿದರು. ಟ್ರಾಫಿಕ್ಕು ಮೂರ್ನಾಲ್ಕು ತಾಸು ಗಬ್ಬೆದ್ದು ಹೋಯಿತು. ಎಲ್ಲ ಟಿ.ವಿ.ಚಾನಲ್ಲುಗಳು, ಪತ್ರಿಕೆಗಳೂ ಈ ಟ್ರಾಫಿಕ್ ಜಾಮ್ ಸುದ್ದಿಗೆ ಒಂದಿಷ್ಟು ಜಾಗ ಮೀಸಲಿಟ್ಟವು. ಜನರೂ ಉಗಿದರು. ಸಂತೋಷ. ಒಂದು ರಾಜಕೀಯ ಪಕ್ಷಕ್ಕೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಅನ್ನುವುದು ಬೇಕಿತ್ತು.
ಹೋದವಾರದ ಒಂದು ದಿನ, ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಆಫೀಸಿಗೆ ಹೊರಟೆ. ಸಜ್ಜನ ರಾವ್ ಸರ್ಕಲ್ಲಿನ ಬಳಿಯೇ ಟ್ರಾಫಿಕ್ ನಿಧಾನಗತಿಯಲ್ಲಿತ್ತು. ತೆವಳಿಕೊಂಡು ಜೇಸೀ ರೋಡು ಸೇರಿದೆ. ಮಾಮೂಲಿ ಸ್ಲೋ ಟ್ರಾಫಿಕ್ ಅಂತಂದುಕೊಂಡೆ. ಆದರೆ ಜೆ.ಸಿ ರೋಡಿಗೆ ಬಂದ ಮೇಲೆ ವಾಹನಗಳು ಒಂದಿಂಚೂ ಕದಲಲಿಲ್ಲ. ನೆತ್ತಿಯ ಮೇಲೆ ಸುಡು ಸುಡು ಬಿಸಿಲು. ಯಾಕೆ ಟ್ರಾಫಿಕ್ ಜಾಮಾಗಿದೆ ಅಂತ ಅಲ್ಲಿದ್ದ ಯಾರಿಗೂ ಗೊತ್ತಿಲ್ಲ. ಪಕ್ಕದ ಡಬ್ಬಲ್ ರೋಡ್ ಕೂಡ ಜಾಮ್ ಆಗಿದೆ ಅನ್ನುವ ಸುದ್ದಿ ಬಂತು.
ನನ್ನೆದುರಿಗೆ ವೃದ್ಧ ದಂಪತಿ ಸ್ಕೂಟರಲ್ಲಿದ್ದರು. ಹಿಂದುಗಡೆ ಕೂತಿದ್ದಾಕೆ, ಬಿಸಿಲಿಗೆ ತಲೆಸುತ್ತಿ ಹಿಂದಕ್ಕೆ ಬಿದ್ದೇಬಿಟ್ಟರು. ಸ್ಕೂಟರನ್ನ ಸಂಭಾಳಿಸಲಾಗದೇ ಆ ವೃಧ್ಧರೂ ಬಿದ್ದರು, ಸ್ಕೂಟರೂ ಬಿತ್ತು. ಆಕೆಗೆ ಪಾಪ ಹಣೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ಅಲ್ಲೆಲ್ಲೂ ಸುತ್ತ ಮೆಡಿಕಲ್ಲೂ ಇಲ್ಲ. ಕರ್ಚೀಫು ಕಟ್ಟಿ, ಬದಿಗೆ ಕೂರಿಸಿದ್ದಾಯಿತು. ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ - ಕಾಲ ಸ್ತಬ್ಧ.ಅಷ್ಟು ಹೊತ್ತಿಗೆ ವಿಷಯವೂ ತಿಳಿಯಿತು, ಕನ್ನಡಕ್ಕಾಗಿ ಓರಾಡುವ ಸಂಘಟನೆಯ ಜಾಥಾವೇನೋ ನಡೆಯುತ್ತಿದೆ ಮುಂದೆ ಅಂತ.
ಒಂದು ಕೆಲಸದ ದಿನ, ಸಾವಿರಾರು ಜನರ ಅಮೂಲ್ಯ ಸಮಯ ಹಾಳಾಗಿ ಹೋಗಿತ್ತು. ಜೊತೆಗೆ ಉರಿ ಬಿಸಿಲಲ್ಲಿ ಒಣಗಿದ್ದು ಬೇರೆ.ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳ ಬಗ್ಗೆ ನನಗೂ ಗೌರವವಿದೆ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಬೇಸರ , ಸಿಟ್ಟು ತರಿಸಿತು. ಅವರ ಈ ಕಾರ್ಯದಿಂದಾಗಿ ತೊಂದರೆಗೊಳಗಾಗಿದ್ದು ಕನ್ನಡದ ಜನತೆಯೇ ಅಲ್ಲವೇ? ಕನ್ನಡದ ಕೆಲಸ ಮಾಡೋಕೆ ಉದ್ದುದ್ದ ಜಾಥಾ, ಒಂದು ಕೆಲಸದ ಬೆಳಗೇ ಆಗಬೇಕಿತ್ತೇ?
ಕನ್ನಡ ಪರ ಸಂಘಟನೆಯಿಂದಾದ ಈ ತೊಂದರೆಯ ಬಗ್ಗೆ , ಯಾವುದೇ ಮಾಧ್ಯಮಗಳು ತುಟಿ ಪಿಟಕ್ ಅನ್ನಲಿಲ್ಲ. ಯಾಕೆ ಸುಮ್ಮನಿದ್ದರು ಅಂದರೆ, ಹೆದರಿಕೆ. ಈಗೀಗ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕೆಲ್ಸ ಮಾಡುವ ಯಾರ ಬಗ್ಗೆಯಾದರೂ ನೀವೇನಾದರೂ ಸ್ವಲ್ಪ ವಿಮರ್ಶೆ ಮಾಡುವ , ಅಥವಾ ಪ್ರಶ್ನೆ ಮಾಡುವ ಧಾಟಿಯಲ್ಲಿ ಬರೆದಿರಿ, ಹೇಳಿದಿರಿ ಅಂದರೆ ನಿಮಗೆ ಕನ್ನಡ ವಿರೋಧಿ ಹಣೆಪಟ್ಟಿ ಹಚ್ಚಲಾಗುತ್ತದೆ.
ಇಂತಹ ಆಷಾಢಭೂತಿತನಕ್ಕೆ ನನ್ನ ಧಿಕ್ಕಾರವಿದೆ.
Thursday, April 17, 2008
ಸರಕಾರದ ಕೆಲಸ, ದೇವರ ಕೆಲಸ.
ಪೋಸ್ಟಾಫೀಸಿಗೆ ಹೋಗಿದ್ದೆ. ಹಿಂದಿನ ದಿನ ರಿಜಿಸ್ಟರ್ ಪೋಸ್ಟ್ ಬಂದಿತ್ತು, ನಾನು ಮನೆಯಲ್ಲಿರಲಿಲ್ಲ. ಒಂದು ಹರಕು ಚೀಟಿಯಲ್ಲಿ ಪೋಸ್ಟ್ ಮ್ಯಾನ್ ಸುಬ್ರಮಣ್ಯಂ ( ಆ ಚೀಟೀಲೇ ಇತ್ತು ಅವನ ಹೆಸರು) ಏನೋ ಬರೆದು ಕೊಟ್ಟು ಹೋಗಿದ್ದ, ಇಂತಿಂತಾ ಪೋಸ್ಟಾಫೀಸಿಗೆ ಬಂದು ಕಲೆಕ್ಟ್ ಮಾಡಿಕೋಬೇಕು ಅಂತ. ಬೆಳಿಗ್ಗೆ ಆಫೀಸಿಗೆ ಹೊರಟವನು ಹೋದೆ ಅಲ್ಲಿಗೆ.
ಗಂಟು ಮುಖದ ಹೆಂಗಸು ಬಾಗಿಲಲ್ಲೇ ಕೂತಿದ್ದಳು."ಸುಬ್ರಮಣ್ಯಂ ಬೇಕಿತ್ತು, ರಿಜಿಸ್ಟರ್ ಪೋ.." ಮಾತು ಮುಗಿಯುವುದರೊಳಗೆ ಆಕೆ ಕೈ ಮೇಲೆತ್ತಿದ್ದಳು.ಅಂಪೈರು ಔಟು ಕೊಡುವ ಹಾಗೆ. ಅರ್ಥವಾಗಲಿಲ್ಲ. "ಮೇಡಮ್, ಸುಬ್ರಮಣ್ಯಂ ಅವರಿದಾರ?" ಅವಳು ತನ್ನ ಬರೆಯುವ ಕೆಲಸ ಮುಂದುವರೆಸುತ್ತ ಕೈ ಮತ್ತೊಮ್ಮೆ ಮೇಲೆತ್ತಿದಳು, ಈ ಬಾರಿಪುಣ್ಯಕ್ಕೆ ಮಾತಾಡಿದಳು. - ಮೇಲಿರ್ತಾರೆ ಹೋಗ್ರೀ.. ನಾನು ಮೇಲೆ ಹೋಗುವ ದಾರಿ ಹಿಡಿದೆ. ಮೇಲೊಂದು ಕುರುಕ್ಷೇತ್ರ. ಒಂದಿಷ್ಟು ಜನ ಪತ್ರಗಳ ಕಟ್ಟನ್ನ ಇತ್ತಿಂದತ್ತ, ಅತ್ತಿಂದಿತ್ತ ಎಸೆಯುತ್ತ ಕೂತಿದ್ದರು.
"ಸಾರ್, ಸುಬ್ರಮಣ್ಯಂ ಅವ್ರು ಇದಾರಾ.."
ಯಾರಿಗೂ ನನ್ನ ಮಾತೇ ಕೇಳಲಿಲ್ಲ, ಸಿಕ್ಕ ಸಿಕ್ಕ ಚೀಲಕ್ಕೆ ಪತ್ರಗಳನ್ನ ಗುರಿಯಿಟ್ಟು ಎಸೆಯುವುದರಲ್ಲೇ ತಲ್ಲೀನರು. ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ. ಒಬ್ಬಾತ ತಣ್ಣಗೆ, ನನ್ನ ಮುಖವನ್ನೂ ನೋಡದೇ, ಕೆಳಗಿರ್ತಾರೆ ಹೋಗಿ ಅಂದ. "ಇಲ್ಲಾ ಸಾರ್, ಅಲ್ಲಿಂದಲೇ ಬಂದೆ" ಅಂದೆ. ಕೆಳಗಿರ್ತಾರೆ ಹೋಗೀ ಅಂತು ಇನ್ನೊಂದು ಶರೀರ, ಮತ್ತೊಮ್ಮೆ. ನಾನು ಮತ್ತೆ ಕೆಳಗಿಳಿದೆ.
ಈ ಬಾರಿ ಗಂಟು ಮೇಡಮ್ ನ ಮಾತಾಡ್ಸೋಕೆ ಧೈರ್ಯ ಸಾಲಲಿಲ್ಲ. ಎದ್ದು ಬಾರಿಸಿದರೆ ಅನ್ನುವ ಅಳುಕು. ಪಕ್ಕದಲ್ಲಿದ್ದ ಮತ್ತೊಬ್ಬ ಪುಣ್ಯಾತ್ಮರನ್ನ ಕೇಳಿದೆ."ಸುಬ್ರಮಣ್ಯಂ.." ಅನ್ನುತಿದ್ದ ಹಾಗೆ, ಅವ್ರು ಹೇಳಿಲ್ವೇನ್ರೀ- ಮೇಲಿರ್ತಾರೆ...ಹೋಗಿ.
ಮತ್ತೆ ಮೇಲೆ- ಅಲ್ಲಿಯಾತ ಹೆಚ್ಚೂ ಕಡಿಮೆ ಕಿರುಚಿಯೇ ಬೆಟ್ಟ. ಹೋಗುತ್ತಿಯೋ ಇಲ್ಲವೋ ಕೆಳಗಡೆಗೆ ಅನ್ನುವ ಹಾಗೆ. ಅವನು ಕಿರುಚಿದ್ದು ನೋಡಿ ಆ ರೂಮುಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಏನಾದರೂ ಕಾಗದ ಪತ್ರಗಳ ವಿಲೇವಾರಿ ಮಾಡುತ್ತಿದ್ದಾರೋ ಅನ್ನುವ ಅನುಮಾನ ಬಂತು. ಮತ್ತೆ ಕೆಳಗೆ. ಹುಚ್ಚು ಹಿಡಿಯುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಕೆಳಗಿನ ಮೇಡಮ್, ಅವ್ರು ಕಾಪಿಗ್ ಹೋಗಿದಾರೆ ಅನ್ಸತ್ತೆ.. ಅನ್ನುವ ರಾಗ ಎತ್ತಿದರು.
ಕಾದೆ. ಹತ್ತು ನಿಮಿಷ. ಕಾಲ ನಿಂತೇ ಹೋದ ಅನುಭವ. ಮತ್ತೆ ಅಲ್ಲಿದ್ದೊಬ್ಬ ಪುಣ್ಯಾತ್ಮ ಬಳಿ ಕೇಳಿದರೆ, ಮೈ ಪರಚಿಕೊಳ್ಳುವುದೊಂದು ಬಾಕಿ. ಈಗಷ್ಟೇ ಬಂದ್ರಲ್ಲ..ಮೇಲೆ ಹೋದ್ರು ನೋಡಿ. ಓಡಿದೆ ಮೇಲೆ. ಯಾವನೋ ಅಡ್ಡ ಬಂದ. ಜಸ್ಟ್ ಮಿಸ್ಸು. ಬಿದ್ದೇ ಹೋಗ್ತಿದ್ದ. ಮೇಲೆ ಇದ್ದವರಿಂದ ಐಸಿನಂತ ಉತ್ತರ ಬಂತು, ಈಗಷ್ಟೇ ಕೆಳಗೆ ಹೋದ್ರು ನೋಡಿ, ಅವರೇ ಸುಬ್ರಮಣ್ಯಂ!
ಅಂತೂ ಆ ಪುಣ್ಯಾತ್ಮನ್ನ ಹಿಡಿದೆ. ಆ ಸಾವ್ಕಾರ್ರು ಮತ್ತೆ ಹತ್ತು ನಿಮಿಷ ನನ್ನ ರಿಜಿಸ್ಟರ್ ಪೋಸ್ಟ್ ಹುಡುಕಿ, ಕಾಣಿಸ್ತಿಲ್ಲ ಸಾರ್, ಮಧ್ಯಾಹ್ನ ಬನ್ನಿ ಅಂದ್ರು.
ಇಲ್ಲಣ್ಣಾ ದಮ್ಮಯ್ಯ ಅಂತೆಲ್ಲ ಹೇಳಿ ಹುಡುಕ್ಸಿ, ಅದ್ನ ಕೈಲ್ ಹಿಡ್ಕೊಂಡು ಹೊರಡಬೇಕಿದ್ರೆ... ಉಫ್..
*******
ಶಾಸಕರ ಭವನಕ್ಕೆ ಯಾರದೋ ಸಂದರ್ಶನ ಮಾಡೋಕೆ ಹೋಗಬೇಕಿತ್ತು. ಆ ಮಾಜಿ ಎಂ.ಎಲ್.ಎ ಅಲ್ಲಿರುವ ಮೂರು ಬಿಲ್ಡಿಂಗ್ ಗಳಲ್ಲಿ ಎಲ್ಲಿರುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ನೆ ಬ್ಲೈಂಡಾಗಿ ಒಂದು ಕಟ್ಟಡಕ್ಕೆ ನುಗ್ಗಿದೆ. ಒಬ್ಬ ಪೋಲೀಸು ಪೇದೆ ಬಾಗಿಲಲ್ಲೇ ಕೂತಿದ್ದ.
"..... ಅವರು ಇಲ್ಲಿ ಇರ್ತಾರ"
ನಿಮ್ಮ ಹೆಸರು? -ಶ್ರೀನಿಧಿ
ಎಲ್ಲಿಂದ ಬಂದಿದೀರಿ?- ಹೆಸರು ಹೇಳಿದೆ.
ಯಾಕೆ?- ಅವರ ಸಂದರ್ಶನ ಮಾಡಬೇಕಿತ್ತು.
ನಿಮ್ಮ ಹೆಸರು ಈ ರಿಜಿಸ್ಟರಲ್ಲಿ ಬರೀರಿ- ಬರೆದೆ.
ವಿಳಾಸನೂ ಬರೀರಿ,ಹಾಂ, ಹಾಗೆ.. - ಅದ್ನೂ ಬರೆದೆ.
ಪೂರ್ತಿ ಬರೀರಿ ಸಾರ್, ವಿದ್ ಪಿನ್ ಕೋಡ್.- ಓಕೆ, ಅದ್ನೂ..
ಯಾರನ್ನ ಮೀಟಾಗಕ್ ಬಂದಿದ್ದೊ ಅಂತ್ಲೂ ಬರೀರಿ- ಹುಂ..
ಯಾಕೆ, ಏನು, ಏತ್ತ ಎಲ್ಲದ್ನೂ ಬರೀರಿ- ಬರ್ದೆ.
"ಎಲ್ಲದೂ ಆಯ್ತಾ?- ಕೇಳಿದೆ. ಆಯ್ತು ಸಾರ್.
"ಅವ್ರು ಇಲ್ಲೇ ಇರ್ತಾರ, ಇದೇ ಬಿಲ್ಡಿಂಗಲ್ಲಿ?"
ಓ ಅಲ್ಲಿ ರಿಸೆಪ್ಶನ್ ಕೌಂಟರ್ ಇದೆ, ಅಲ್ ಹೋಗಿ ಕೇಳಿ- ಹೇಳ್ತಾರೆ!!!
ಸರಕಾರದ ಕೆಲಸ, ದೇವರ ಕೆಲಸ.
Saturday, April 12, 2008
ಪೂರ್ಣಚಂದ್ರ ತೇಜಸ್ವಿ ಮತ್ತೆ ಬಂದಿದ್ದಾರೆ!
ಸುಮ್ನೆ ಮಾಡೋಕೇನೂ ಕೆಲಸ ಇಲ್ಲದಿದ್ದಾಗ, ಅಥವಾ ಆಫೀಸಿಂದ ಬೇಗ ಹೊರಟರೆ ಗಾಂಧೀ ಬಜಾರಲ್ಲಿ ಒಂದ್ ಸುತ್ ಹೊಡೆಯೋದು ಅಭ್ಯಾಸ ನನಗೆ. ಗಾಂಧಿ ಬಜಾರು ಅಂದರೆ ಐಸ್ ಥಂಡರು, ಮಹಾಲಕ್ಷ್ಮೀ ಟಿಫನ್ ರೂಮು ಮತ್ತು ಅಂಕಿತ ಬುಕ್ ಸ್ಟಾಲು.
ಮೊನ್ನೆ ಹೀಗೇ ಅಂಕಿತಕ್ಕೆ ಹೋದೆ, ವಿನಾಕಾರಣ. ಯಾವುದಾದರೂ ಹೊಸ ಪುಸ್ತಕ ಇದೆಯಾ ಅಂತ ಹುಡುಕಾಡಿದೆ. ಕಾಣಲಿಲ್ಲ. ಬೇಕಾದ್ದು ಇರಲಿಲ್ಲ. ಎಂದಿನ ಹಾಗೆ ತೇಜಸ್ವಿ ಪುಸ್ತಕ ಇದ್ದ ಸಾಲುಗಳನ್ನು ನೋಡಿದೆ. ಅದೊಂದು ಅಭ್ಯಾಸ ನನಗೆ. ಎಟ್ ಲೀಸ್ಟ್ ಅವರ ಹಳೆಯ ಪುಸ್ತಕಗಳ ಹೊಸ ಮುಖಪುಟ ವಿನ್ಯಾಸಗಳನ್ನಾದರೂ ನೋಡಿ, ಹಾಗೇ ಆ ಪುಸ್ತಕಗಳನ್ನ ಮತ್ತೆ ಎಲ್ಲಿತ್ತೋ ಅಲ್ಲಿಡುತ್ತೇನೆ. ಮೊನ್ನೆ ಮಾತ್ರ ಅತ್ಯಂತ ಅಚ್ಚರಿ ಕಾದಿತ್ತು ನನಗೆ. ತೇಜಸ್ವಿಯವರ ಹೊಸ ಪುಸ್ತಕವೊಂದು ಬೆಚ್ಚಗೆ ಕುಳಿತಿತ್ತು ಅಲ್ಲಿ. ಹೌದು ಕಣ್ರೀ, ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಹೊಸ- ಹೊಚ್ಚ ಹೊಸ ಪುಸ್ತಕ! ಖುಷಿಯಿಂದ ಕಿರಿಚುವುದೊಂದು ಬಾಕಿ. ನನ್ನ ಯದ್ವಾ ತದ್ವಾ ಹಾವಭಾವದ ಕಣ್ಣು- ಮುಖಗಳನ್ನು ನೋಡಿ ಶ್ರೀಮತಿ ಕಂಬತ್ತಳ್ಳಿಯವರು , "ಇವತ್ತಷ್ಟೇ ಬಂತು ಈ ಪುಸ್ತಕ" ಅಂದರು.
"ಪಾಕಕ್ರಾಂತಿ ಮತ್ತು ಇತರ ಕಥೆಗಳು" ಅನ್ನುವುದು ಕಥಾ ಸಂಕಲನದ ಹೆಸರು. 1998 ರಿಂದ 2007ರ ವರೆಗೆ - ಲಂಕೇಶ್ ಪತ್ರಿಕೆಯಿಂದ ಹಿಡಿದು ವಿಕ್ರಾಂತ ಕರ್ನಾಟಕದವರೆಗೆ ಪ್ರಕಟವಾದ ಎಂಟು ಕಥೆಗಳಿವೆ ಇದರಲ್ಲಿ. ನಾನಂತೂ ದೇವರಾಣೆಯಾಗೂ ಒಂದೂ ಕಥೆಯನ್ನು ಈ ಮೊದಲು ಓದಿರಲಿಲ್ಲ. ತೇಜಸ್ವಿ ಈಗತಾನೇ ಕೂತು ಈ ಕಥೆಗಳನ್ನ ಬರೆದು ಮುಗಿಸಿ, ಪಬ್ಲಿಶ್ ಮಾಡಿಸಿದ್ದಾರೆ ಅನ್ನಿಸಿತು ನನಗಂತೂ. ಪುಸ್ತಕ ಪ್ರಕಾಶನಕ್ಕೆ ಸಾವ್ರ ಧನ್ಯವಾದ!
ಬೆನ್ನುಡಿಯಲ್ಲಿ ಹೇಳಿದ ಹಾಗೆ, " ಪೂರ್ಣಚಂದ್ರ ತೇಜಸ್ವಿಯವರು ನಮ್ಮ ತಲೆಮಾರಿನ ಒಂದು ಅದ್ಭುತ ಪ್ರತಿಭೆ ಹಾಗೂ ಪ್ರಕ್ರಿಯೆ. ಅವರ ಅನುಪಸ್ಥಿತಿಯಲ್ಲಿ ಅವರು ಸೃಷ್ಟಿಸಿರುವ ಲೋಕದ ಬಂಧಿಗಳು ನಾವು".
ನಾನಂತೂ ಇಲ್ಲಿನ ಕಥೆಗಳಲ್ಲಿ ಏನಿದೆ ಅಂತ ಒಂದು ಸಾಲೂ ಹೇಳುವುದಿಲ್ಲ. ತಗಂಡು ಓದಿ. ಅಂಕಿತಕ್ಕೋ, ಸಪ್ನಾಕ್ಕೋ ಹೋಗಿ, ಬೆಂಗಳೂರಿಗರು. ಮಂಗಳೂರಿಗರಿಗೆ ಅತ್ರಿ, ಮೈಸೂರಲ್ಲಿ ಗೀತಾ ಬುಕ್ ಹೌಸು..
ಪೋಸ್ಟ್ ಮುಖಾಂತರ:
ಪುಸ್ತಕ ಪ್ರಕಾಶನ,
ಬುಕ್ ಪೋಸ್ಟ್ ಸರ್ವೀಸ್,
ಪೋಸ್ಟ್ ಬಾಕ್ಸ್ ನಂ:58,
ಮೂಡಿಗೆರೆ-577132,
ಚಿಕ್ಕಮಗಳೂರು ಜಿಲ್ಲೆ,
ಫೋನು- 08263-228353,240202
ಹ್ಯಾಪಿ ರೀಡಿಂಗು!.
Monday, April 07, 2008
ಬೆಂಗಳೂರಿನ ಹೂಗಳು
ಯುಗಾದಿ ಹಬ್ಬಕ್ಕೆ ಪ್ರಕೃತಿ ತನ್ನನ್ನು ತಾನು ಸಿಂಗರಿಸಿಕೊಳ್ಳುವ ಬಗೆ ಅದ್ಭುತ. ಮೊನ್ನೆ ಕ್ಯಾಮರಾ ಜೊತೆ ಸುತ್ತಬೇಕಿದ್ದರೆ ಕೆಲವೊಂದಿಷ್ಟು ತಂಪು ಚಿತ್ರಗಳು ಸೆರೆಸಿಕ್ಕವು.
Tuesday, March 25, 2008
"ಷ".
ನಾನು ಆಗ ಒಂದನೇ ಕ್ಲಾಸ್ ನಲ್ಲಿದ್ದೆ. ಟೀಚರ್ರು ಎಲ್ಲರಿಗೂ ಕನ್ನಡದ ಒಂದೊಂದು ಅಕ್ಷರವನ್ನು ತೋರಿಸಿ ಅದನ್ನು ಗುರುತಿಸಲು ಹೇಳುತ್ತಿದ್ದರು. ನನ್ನ ಪಾಳಿ ಬಂತು. ಅವರು "ಷ" ಅಕ್ಷರವನ್ನು ತೋರಿಸಿ ಓದು ಅಂದರು. ನನಗೆ ಏನಾಯಿತು ಅಂತ ಗೊತ್ತಿಲ್ಲ, ಯಾಕೆ ಹಾಗಾಯಿತು ಅಂತಲೂ ಗೊತ್ತಿಲ್ಲ, ಏನು ಮಾಡಿದರೂ ಈ ಅಕ್ಷರವನ್ನು ಗುರುತಿಸಲೇ ಆಗಲಿಲ್ಲ. ನಾನು ಅವರನ್ನೂ , ಆ ಅಕ್ಷರವನ್ನೂ ನೋಡುತ್ತ ಸುಮ್ಮನೇ ನಿಂತುಬಿಟ್ಟೆ. ಟೀಚರ್ ನನ್ನ ಕನ್ನಡ ಪುಸ್ತಕದ, "ಷ" ಅಕ್ಷರದ ಎದುರಿಗೆ ಕೆಂಪು ಶಾಯಿಯಲ್ಲಿ ತಪ್ಪು ಮಾರ್ಕ್ ಹಾಕಿದರು. ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು. ಆಮೇಲೆ ಬಹುಕಾಲ ನನ್ನನ್ನು ಆ ಟೀಚರ್ರು "ಕನ್ನಡ ಮಾಸ್ಟ್ರ ಮಗನಾಗಿ ಕನ್ನಡ ಅಕ್ಷರನೇ ಓದೋಕೆ ಬರೋದಿಲ್ಲ ನಿಂಗೆ" ಅಂತ ಹೀಯಾಳಿಸುತ್ತಲೇ ಇದ್ದರು. ಇವತ್ತಿಗೂ ಆ ಕೆಂಪು ಶಾಯಿಯ ತಪ್ಪು ಗುರುತು, ನನ್ನ ಕಣ್ಣೆದುರಿಗೇ ಇದೆ.
******
*****
ಮೊನ್ನೆ ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದರು, ಅವರಿಗೊಬ್ಬ ಪುಟ್ಟ ಮಗಳು, ೪ ವರ್ಷದವಳು. ಅವಳು ಚೆನ್ನಾಗಿ ಸಿನಿಮಾ ಹಾಡೆಲ್ಲ ನೆನಪಿಟ್ಟುಕೊಂಡು ಹಾಡುತ್ತಾಳೆ ಅಂತಿದ್ದರು ಅವರು. ಇಲ್ಲ ಚಿಕ್ಕಮ್ಮಾ, ನಾಡಿದ್ದು ಶಾಲೆಗೆ ಸೇರಿದ ಮೇಲೆ ನಿನ್ನ ಮಗಳು ಹಾಡುವ ಉಲ್ಲಾಸದ ಹೂಮಳೇ.. ವರ್ಕೌಟ್ ಆಗುವುದಿಲ್ಲ, ಬೇರೇನಾದರೂ ಬೇಕಾಗುತ್ತದೆ ಅಂದೆ. ಆವಾಗ ಇದೆಲ್ಲ ನೆನಪಾಯಿತು.




