Tuesday, October 13, 2009

ಹಬ್ಬದ ಸಂಜೆ

ಬೆಟ್ಟ ತಪ್ಪಲಿನಾಚೆ ಕರಿಮೋಡ ಕವಿಯುತಿದೆ
ಇಲ್ಲಿ ಹೊಳೆಯುವ ಬೆಳಕು, ಮಾಗು ಬೈಗು
ನೆಟ್ಟನೋಟದ ಕಣ್ಣು ಬಯಲಾಚೆ ನೋಡುತಿದೆ
ಹೊಸ್ತಿಲಿನ ಹುಡುಗಿಗೆ, ಅವನದೇ ಗುಂಗು

ಮನೆಯ ಮಂದಿಯ ಗೌಜು ಹಬ್ಬವಾಗಿದೆಯಿಲ್ಲಿ
ಇವನ ಬರವಿನ ಅರಿವು ಯಾರಿಗಿಲ್ಲ
ಕತ್ತಲಿನ ನಡೆಯವಗೆ ಹೆಚ್ಚು ತಿಳಿಯದು ಬೇರೆ
ಮುಗಿಲೊಡೆಯುವಾ ಮೊದಲೆ ಬರುವನಲ್ಲ?

ಮುಂಜಾವು ಕಟ್ಟಿದ್ದ ಬಾಗಿಲಿನ ಹೂಮಾಲೆ,
ಈಕೆ ವದನದ ಹಾಗೆ ಮೆಲ್ಲ ಬಾಡುತಿದೆ
ಕುರುಡುದೀಪಗಳೆಲ್ಲ ಕಣ್ಣ ಬೆಳಕಿಗೆ ಕಾದು
ಇವಳಂತೆಯೇ ಪಾಪ, ಸುಸ್ತಾಗಿವೆ

ಶಂಖದನಿಗಳ ಮಧ್ಯೆ ಪೂಜೆ ಮಂಗಲ ಕಾರ್ಯ
ದೇವರೆದುರಲೂ ಮನ ಹರಿವ ಝರಿಯು
ಹೊರಗೆ ಏನೋ ಮಾತು, ಸಣ್ಣ ಸರಭರದೋಡು
ನಡೆದಿಹುದು ಮೆಲ್ಲ, ಉಭಯಕುಶಲೋಪರಿಯು

ಆರತಿಯ ತಟ್ಟೆಯನು ಹಿಡಿದು ನಡೆಯುತಲಿರಲು
ತಡೆದ ಕೈಗಳ ಬಿಸುಪು ಲಜ್ಜೆ ತರಿಸಿತ್ತು
ಸಾಲುದೀಪಗಳೆಲ್ಲ ಒಂದೊಂದೇ ನಗುತಿರಲು
ಹೊರಗೆ ಅಂಗಳದಲ್ಲಿ ನೆಲವು ನೆನೆದಿತ್ತು..

Wednesday, October 07, 2009

ಕೆರೆಯ ನೀರನು ಕೆರೆಗೆ ಚೆಲ್ಲಿ

ಎಲ್ಲ ಕಡೆ ನೆರೆ ಪರಿಹಾರ ನಿಧಿ ಸಂಗ್ರಹಣೆ ಜೋರಾಗಿ ನಡೆಯುತ್ತಿದೆ. ಬೆಂಗಳೂರಿನಲ್ಲೂ ಕೂಡ ಇವತ್ತು ಭರ್ಜರಿ ಜಾಥಾ ಇತ್ಯಾದಿಗಳು ನಡೆದು ಕೋಟ್ಯಾಂತರ ರೂಪಾಯಿ ಸಂಗ್ರಹ ಆಗಿರುವುದು ಸಂತಸದ ವಿಚಾರ.

ಏನಾಗಿದೆ ಅಂದ್ರೆ, ಎಲ್ಲ ಪಕ್ಷಗಳೂ ಕೂಡ ಗಲ್ಲಿ ಗಲ್ಲಿ, ಬೀದಿ ಬೀದಿ, ಮುಖ್ಯ ರಸ್ತೆಗಳಲ್ಲಿ ಸುತ್ತುತ್ತಿದ್ದು, ಕೆಲ ಪುಂಡು ಲೀಡರುಗಳಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಇದು ಸದವಕಾಶ. ಇವತ್ತು ಹೀಗೊಂದು ಘಟನೆ ಆಯಿತು.

ಘನತೆವೆತ್ತ ಪಕ್ಷದ ಘನತೆವೆತ್ತ ಮುಖಂಡರೊಬ್ಬರು ನಿಧಿ ಸಂಗ್ರಹದ ಡಬ್ಬಿ ಹಿಡಿದು ಅಂಗಡಿ ಅಂಗಡಿ ಬಾಗಿಲಿಗೆ ಹೋಗುವುದೂ, ಅವರು ಹೋದಕೂಡಲೇ ಅಂಗಡಿ ಮಾಲಿಕ ಹತ್ತೋ, ಐವತ್ತೋ, ನೂರೋ ರೂಪಾಯಿ ಹಾಕುವುದೂ ನಡೆದೇ ಇತ್ತು. ಟೀವೀ ಚಾನಲಿನ ಕ್ಯಾಮರಾಗಳೂ ಹಿಂಬಾಲಿಸಿದ್ದವು.

ಒಂದೆಡೆ ಕ್ಯಾಮರಾಗಳು ಮುಂದೆ ಹೋದವು, ಶ್ರೀಯುತರೂ ಕ್ಯಾಮರಾಗೆ ಪೋಸುಕೊಡುತ್ತ ಶಾಪ್ ಓನರ್ ಎದುರು ಡಬ್ಬಿ ಹಿಡಿದರು, ಅವರು ಅದೆಷ್ಟೋ ದುಡ್ಡು ತುರುಕಿ ತಾವೂ ಕ್ಯಾಮರಾಗೆ ಹಲ್ಕಿರಿದರು. ಮುಖಂಡ ಮಹಾಶಯರು, "ದೇಣಿಗೆ ನೀಡಿದ್ದಕ್ಕೆ ಸಂತೋಷ, ಥ್ಯಾಂಕ್ಸು" ಅಂದಾಗ ಆ ಪುಣ್ಯಾತ್ಮ - ಅಯ್ಯ ನಿಮ್ದೇ ದುಡ್ಡು ನಿಮ್ದೇ ಡಬ್ಬಿ ಅದಿಕ್ಕೆಲ್ಲ ಯಾಕೆ ಥ್ಯಾಂಕ್ಸು ಬಿಡೀ ಸಾರ್" ಅಂದು ಬಿಟ್ಟರು! ಪಾಪ, ಲೀಡರ್ರು ತಬ್ಬಿಬ್ಬು! ಅದ್ನೆಲ್ಲ ಏನ್ ಹೇಳ್ತೀರಿ ಮರ್ಯಾದಿ ಕಳೀಬೇಡಿ ಅಂತ ಬಡಬಡನೆ ಮುಂದೋಡಿತು ಸವಾರಿ..

ವಿಷ್ಯ ಏನೂಂತ ಕೇಳಿದ್ರೆ, ಈ ಮುಖಂಡರಿಗೆ ಮೂರು ಚೇಲಾಗಳು.. ಅವರು, ಎಲ್ಲರಿಗಿಂತ ಮೊದಲು ಅಂಗಡಿಗಳಿಗೆ ಹೋಗಿ, ವಿಶ್ಯ ಹೀಗೀಗೆ, ದುಡ್ಡು ಕೊಡಿ ಅನ್ನೋದು.. ಅಲ್ಲಿದ್ದವ್ರು ಜೈ ಅಂದ್ರೆ ಸಂತೋಷ.. ಇಲ್ಲದೇ ಇದ್ದರೆ, ಆ ಶಾಪ್ ನ ಗೆಟಪ್ ನೋಡಿ ಯಥಾಸಾದ್ಯ ದುಡ್ಡು ಕೈಲಿ ಹಿಡಿಸಿ, ಹಾಕಿ ಇದ್ನ ಪ್ಲೀಸ್, ನಮ್ ಸಾಯಬ್ರುದು ಮರ್ಯಾದೆ ಪ್ರಶ್ನೆ ಅನ್ನೋದು..

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ!

Monday, October 05, 2009

ಆಗ್ರಹ

ಇಂಥ ಹುಚ್ಚು ಮಳೇಲಿ
ಮನೇ ತಂಕ
ಬಿಟ್ಟು , ಚೂರಾದ್ರೂ
ಅಪ್ಪಿಕೊಳೇ
ಇಲ್ಲ ಪಪ್ಪಿ ಕೊಡೇ
ಅಂದ್ರೆ,
ತಪ್ಪಿಸಿಕೊಂಡು ಹೋದಳಲ್ಲ,
ಹೀಗೆಲ್ಲ ಮಾಡಬಾರದು ಅಂತ
ನ್ಯೂಟನ್ನು, ಐನ್ ಸ್ಟೀನು
ಬರೆದಿಲ್ಲವ ಎಂಥದೂ ತತ್ವ?
ಹೊರಡಿಸಬೇಕಿದೆ ಇಂಥ
ಅನ್ಯಾಯಕ್ಕೆಲ್ಲ
ಅರ್ಜೆಂಟಾಗಿ, ಫತ್ವಾ!

Sunday, August 16, 2009

ಅಜ್ಜನಂಗಿ ತೊಟ್ಟ ಮೊಮ್ಮಗು..

ತೋಡು. ಹೀಗಂದರೆ ಮಲೆನಾಡಿನ ಕಡೆಯವರಿಗೆ ಹಂಡೆ ನೆನಪಾಗುತ್ತದೆ.ಹಂಡೆಯಿಂದ ಬಿಸಿ ಬಿಸಿ ನೀರೆತ್ತಿ ಬಾನಿಗೋ,ಬಕೇಟಿಗೋ ಬೆರೆಸುವುದು ನೆನಪಾಗುತ್ತದೆ. ನೀರ್ ತೋಡ್ಕ್ಯಂಡು ಸ್ನಾನಾ ಮಾಡಾ ಅಪೀ, ಬಿಸೀ ಇದ್ದು ನೀರು ಅಂತ ಅಮ್ಮ ಒಳಗೆಲ್ಲೋ ಅಡಿಗೆಮನೆಯಿಂದ ಕೂಗುವುದು ಕಿವಿಯೊಳಗೆ ಕೇಳಿಸಿದಂತಾಗುತ್ತದೆ. ಅದರೆ ಇಲ್ಲಿ ಹೇಳುತ್ತಿರುವ ತೋಡು,ದಕ್ಷಿಣ ಕನ್ನಡದ್ದು. ಪಕ್ಕಾ ತುಳುಭಾಷೆಯಿಂದ ಎತ್ತಿಕೊಂಡಿದ್ದು.

ತೋಡು ಎಂದರೆ ಹಳ್ಳ. ಪುಟ್ಟ ನೀರ ಹರಿವು. ಝರಿ. ಝರಿ ಎನ್ನುವುದಕ್ಕಿಂತ, ನೀರದಾರಿ ಎನ್ನಬಹುದೇನೋ. ಮಳೆಗಾಲದಲ್ಲಿ ಮಾತ್ರ ಎಲ್ಲೆಲ್ಲೆಂದಲೋ ಬರುವ ಜಲದ ಬಲಗಳಿಗೆ, ಗಮ್ಯದ ಸರಿದಾರಿ ತೋರೋ ಮೊದಲ ಕ್ರಾಸು. ದೂರ ನೀರಯಾನದ ಮೊದಲ ಕೊಂಡಿ. ಬೆಟ್ಟದೆಲೆಗೂ ಸಾಗರದ ಹರವು ತೋರಿಸುವ ಪುಣ್ಯಪಥ. ಮಳೆ ಗಾಳಿಗೆ ಮುರಿದು ಬಿದ್ದ ಹೂವ ಗೊಂಚಲನ್ನೂ ಸಮಾಧಾನ ಮಾಡಿ ಎತ್ತಿಕೊಂಡು ಸಾಗುವ ಜಲರಥ.

ಬೇಸಿಗೆಯಿಡೀ ಈ ನೀರ ದಾರಿಗಳು, ತಮ್ಮ ಇರವಿನ ಅರಿವು ಯಾರಿಗೂ ಅಗದಂತೆ ಜಡವಾಗಿ ಬಿದ್ದುಕೊಂಡಿರುತ್ತವೆ. ಹಾಡಿಯ ಬೈತಲೆ ತೆಗೆದು ಕೆಳಗೆ ಗದ್ದೆ ಸಾಗಿರುವ ಸಣ್ಣ ದಾರಿ, ಮಳೆಗಾಲದಲ್ಲಿ ಪುಟ್ಟ ಜಲಪಾತದಂತೆ ಕಾಣುತ್ತದೆ ಎಂದು ಯಾರೆಣಿಸಿಯಾರು? ತೆಂಗಿನ ತೋಟದೊಳಗಿನ, ಇಲಿ ತೂತು ಮಾಡಿರುವ ಬಾಡಿ ಬಿದ್ದಿರುವ ಎಳನೀರು ತುಂಬಿಕೊಂಡ ತೋಡು, ಮನೆ ಕೊಟ್ಟಿಗೆ ಪಕ್ಕದಲ್ಲಿ ಸಗಣಿನಾತ ಬೀರುತ್ತ ನಿಂತ ತೋಡು, ರಣರಣ ಬಿಸಿಲಲ್ಲಿ ಮರದ ಕೆಳಗೆ ಸಾಗಿ ಹೋಗಿ, ದೂರದಲ್ಲೆಲ್ಲೋ ಕರಗಿ ಹೋದಂತೆ ಕಾಣುವ ತೋಡು, ಕಾಲುದಾರಿಯ ಪಕ್ಕಕ್ಕೇ ಇದ್ದು, ಉದ್ದಕ್ಕೆ ಮಲಗಿರುವ ಹಾವೊಂದಕ್ಕೆ ತನ್ನೊಳಗೆ ಅಶ್ರಯ ಕೊಟ್ಟು, ಭುಸ್ ಅಂತ ಹೆದರಿಸುವ ತೋಡು-ಹೀಗೆ ಥರ ಥರ.

ಕಳೆದ ಮಳೆಋತುವಿನ ಪಳೆಯುಳಿಕೆಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡು ಸುಮ್ಮಗೆ ಸತ್ತಂತಿರುವ ತೋಡುಗಳಿಗೆ, ಜೀವಸಂಚಾರವಾಗುವುದು ಮೊದಲೆರಡು ಮಳೆ ಬಂದ ಮೇಲೆ. ಬೆಂದನೆಲ ತಂಪುಗೊಂಡು , ಗುಡ್ಡ ಹಾಡಿಗಳಿಂದ, ಗದ್ದೆ ಬಯಲುಗಳಿಂದ ನೀರು ಹಳ್ಳಕಿಳಿಯಲು ಎರಡು ದೊಡ್ಡ ಮಳೆಯಾದರೂ ಬೇಕು. ಹದವಾಗಿ ಮಳೆ ಶುರುವಾಗುತ್ತಿದ್ದ ಹಾಗೆ, ಹಳ್ಳವೂ ಹದಗೊಳ್ಳುತ್ತದೆ. ಎರಡು ಭಾರೀ ಮಳೆ ಬಿದ್ದ ಬಳಿಕ ತೋಡಿನ ಹರಿವು ಸರಾಗ. ಬಿದಿರ ಮುಳ್ಳುಗಳು,ಬಾಟಲಿ ಚೂರುಗಳು ಇತ್ಯಾದಿ ನೀರಿನ ಹರಿವೊಳಗೆ ಕಳೆದು ಹೋದಮೇಲೆ ಹಳ್ಳಕ್ಕಿಳಿಯುವ ಧೈರ್ಯ.

ಶರಧಾರೆ ಜೋರಾದರೆ ಅಜ್ಜನಂಗಿ ತೊಟ್ಟಂತಹ ಮೊಮ್ಮಕ್ಕಳ ಸಂಭ್ರಮ ಹಳ್ಳಕ್ಕೆ. ತಮ್ಮ ಮಿತಿ ದಾಟಿ, ಅಗಲಗಲವಾಗಿ ಉಕ್ಕೇರಿ ಸಿಕ್ಕ ಅವಕಾಶಗಳನ್ನೂ ದಾಟಿ ಹರಿವ ಹುರುಪು.ಪಕ್ಕದ ಗದ್ದೆ ಬದುಗಳನ್ನು ಗುದ್ದಿ, ಕಾಲ್ದಾರಿಯನ್ನು ಸೀಳಿ,ಹೊಸ ದಿಕ್ಕಿಗೆ ಹೊರಳಿ, ತಗ್ಗುದಿಣ್ಣೆಗಳನ್ನು ಸಮಮಾಡಿ ಅದೆಲ್ಲಿಗೋ ಅವಸರವರಸವಾಗಿ ಹೊರಟಂತೆ ಕಾಣುವ ಹಳ್ಳಗಳ ಸೊಬಗು,ಅಹಾ.

ದಕ್ಷಿಣ ಕನ್ನಡದ ಹಲವೆಡೆ ಮಳೆಗಾಲ ಆರಂಭವಾಗಿ, ಇಂತಹ ಜೋರು ನೆರೆಯುಕ್ಕುವಂತಹ ಮಳೆ ಬರಲು ಶುರುವಾದರೆ ತೋಡಿನ ಬಳಿಯಲ್ಲಿ ಕೈಯಲ್ಲೊಂದು ಮಕ್ಕೇರಿ ಹಿಡಿದು ನಿಂತ ಪೋರರು, ಕೆಲಸವಿಲ್ಲದ ಮಧ್ಯವಯಸ್ಕರು ಕಂಡೇ ಕಾಣುತ್ತಾರೆ. ಮಕ್ಕೇರಿ ಎಂದರೆ, ಉದ್ದ ಬಿದಿರ ಕೋಲ ತುದಿಗೆ ಬಲೆಯಚೀಲ. ಧೋ ಎಂದು ಸುರಿಯುವ ಮಳೆಯೊಳಗೆ ಧ್ಯಾನಸ್ಥರಂತೆ ನಿಂತಿರುವ ಈ ಮಂದಿ ಸಟಕ್ಕನೆ ಮಕ್ಕೇರಿಯನ್ನ ಹಳ್ಳಕ್ಕೆ ತೂರಿಸಿ ಮೇಲೆತ್ತಿದರು ಅಂದರೆ ತೆಂಗಿನಕಾಯಿಯೊಂದು ಅದರೊಳಗೆ ಬಂಧಿಯಾಯಿತು ಎಂತಲೇ ಅರ್ಥ.ಮಳೆಗಾಲದ ಗಾಳಿಜೋರಿಗೆ ತೋಡಂಚಿನ ಮರಗಳಿಂದುದುರಿದ ಕಾಯಿಗಳು ದಿಕ್ಕುದೆಸೆಯಿಲ್ಲದೇ ತೇಲಿ ಬರುತ್ತಿದ್ದರೆ, ಇವರುಗಳಿಗೆ ಹಬ್ಬ.
ಒಳ್ಳೆಯ ಮಳೆ ಬಂದರೆ ಮಕ್ಕೇರಿ ಪಡೆ ದಿನವಿಡೀ ಕಾದು ನೂರು ತೆಂಗಿನಕಾಯಿಗಳವರೆಗೆ ಹಿಡಿದ ದಾಖಲೆಗಳೂ ಇವೆ. ಮೊಣಕಾಲು ದಾಟಿ ಬರುವ ನೀರಲ್ಲಿ ತೊಪ್ಪೆಯಾಗಿ ನಿಂತು, ಕೈಲೊಂದು ವಿಚಿತ್ರ ಹತಾರಿನೊಡನೆ ನಿಂತ ಇವರುಗಳನ್ನು ನೋಡಿದಾಗ, ಹಳ್ಳದೊಳಗಿಂದಲೇ ಅವಿರ್ಭವಿಸಿದ ಜಲಮಾನವರಂತೆ ಕಾಣುತ್ತಿರುತ್ತಾರೆ.

ಕೇವಲ ತೆಂಗಿನಕಾಯೊಂದೇ ಹರಿದುಬರುವುದಿಲ್ಲ ಈ ಮಳೆಯೊಳಗೆ. ಇನ್ನೂ ಎಂಥೆಂಥ ಅಚ್ಚರಿಗಳು ಕೂಡ. ಬೇಸಿಗೆಯಲ್ಲಿ ಗುಡ್ಡದ ಮೇಲಿನ ಬಯಲಲ್ಲಿ ಕ್ರಿಕೆಟ್ ಅಡುವಾಗ, ತಾನೇ ಸಿಕ್ಸರ್ ಹೊಡೆದು ಕಳೆದು ಹಾಕಿದ್ದ ಕೆಂಪು ಬಣ್ಣದ ಟೆನಿಸ್ ಚೆಂಡು, ಈಗೋ, ನನ್ನ ತೆಗೆದುಕೋ ಎಂಬಂತೆ ಕಾಲ ಬಳಿಯೇ ಸುಳಿದು ಬರುತ್ತದೆ. ಶೆಟ್ಟರ ತೋಟದ ಪೇರಲೆ ಹಣ್ಣು, ಬುಡಕಿತ್ತುಕೊಂಡೇ ಬಂದ ಅನಾನಸ್ಸು ಗಿಡ, ಹೀಗೆ.

ಮಳೆ ನಿಂತ ರಾತ್ರಿಗಳ ಜೀರುಂಡೆ ಸದ್ದಿನ ಕತ್ತಲಲ್ಲಿ ಕೆಲಬಾರಿ ಮನೆಗಳಿಂದ ದೂರದ ಗದ್ದೆಗಳಂಚಿನ ತೋಡಲ್ಲಿ ಕಥೆಗಳಲ್ಲಿ ಕೇಳಿದ ಮಾಯಾಜಗತ್ತಿನ ಪ್ರವೇಶ ದ್ವಾರದಂತಹ ಕೆಂಪುಕೆಂಪು ಬೆಳಕಸಾಲು ಕಾಣುತ್ತದೆ.ಹೊಸದಾಗಿ ಇವುಗಳನ್ನು ನೋಡುವವರು ತಮ್ಮೆಲ್ಲ ವೈಜ್ಞಾನಿಕ ತರ್ಕಗಳನ್ನು ಸಾರಾಸಗಟಾಗಿ ತಳ್ಳಿಹಾಕಿ, ಕೊಳ್ಳಿ ದೆವ್ವಗಳ ಇರವನ್ನು ಒಪ್ಪಿಕೊಂಡುಬಿಡುತ್ತಾರೆ. ಇಲ್ಲವಾದರೆ, ರಾತ್ರಿ ಹತ್ತರ ನಂತರದ ಗಾಢಾಂಧಕಾರದಲ್ಲಿ ವಿಶಾಲ ಬಯಲಿನ ಮಧ್ಯದ ಮರಗಳ ಮರೆಗಳಾಚೆ ಫಳಫಳ ಮಿನುಗುತ್ತ ಸಾಗುವ ತೇಜಪುಂಜಗಳಿಗೆ ಜಗತ್ತಿನ ಯಾವ ಸಿದ್ಧಾಂತ ಉತ್ತರ ಹೇಳೀತು?

ವಾಸ್ತವವಾಗಿ ಇವು ಏಡಿ ಹಿಡಿವ ತಂಡದ ಕರಾಮತ್ತು. ಸೂಟೆಸಾಲಿನ ಮಂದಿ, ಕಣ್ಣಿಗೆ ಕಾಣದ ಸಮಸ್ತ ಜೀವಜಾಲಗಳು ವಿಚಿತ್ರ ಸದ್ದು ಹೊರಡಿಸುತ್ತ ಬಿದ್ದುಕೊಂಡಿರುವ ರಾತ್ರಿಗಳಲ್ಲಿ ಹಳ್ಳಗಳಲ್ಲಿ ಓಡಾಡುವ ಏಡಿಗಳನ್ನು ಹಿಡಿಯಲು ಹೊರಡುತ್ತಾರೆ. ಕೈಲಿ ಕತ್ತಿ ಹಿಡಿದವರೊಂದಿಷ್ಟಾದರೆ, ಅವರಿಗೆ ಒಣತೆಂಗಿನ ಮಡಲು ಸುತ್ತಿದ ಸೂಟೆಗಳ ಬೆಳಕು ತೋರಲು ಮತ್ತಷ್ಟು ಜನ. ಸಳ ಸಳ ಸದ್ದು ಮಾಡುತ್ತ ಸಾಗುವ ನೀರಿಳಿದ ತೋಡಿನಲ್ಲಿ ಚಕಚಕನೋಡುವ ಏಡಿಗಳನ್ನು ಕತ್ತಿಯಲ್ಲಿ ಕುಕ್ಕಿ, ಕೊಂಬುಮುರಿದು ಬುಟ್ಟಿ ತುಂಬುತ್ತ ಸಾಗುತ್ತಾರೆ.ಮಾರನೇ ದಿನದ ವರ್ಷಧಾರೆಯ ಜೊತೆಗಿನ ಬಿಸಿಬಿಸಿ ಮನೆಯೂಟಕ್ಕೆ, ಏಡಿ ಕಜ್ಜಾಯ.

ಮಳೆಗಾಲದ ಬಣ್ಣದವೇಷ ಮುಗಿಯುತ್ತಿದ್ದ ಹಾಗೆ, ಹಳ್ಳ ಶುಭ್ರ. ಕೆಂಪು ನೀರೆಲ್ಲ ಹಣಿದು ತೋಡಿನ ತಳ ಕಾಣುವ ಸ್ವಚ್ಛ ನೀರಿನ ಹರಿವು ಅರಂಭ. ಬಿಸಿಲಕಿರಣಗಳ ಹೊಳಪಿಗೆ ಹಳ್ಳ ಕೂಡ ಮೈಯೊಡ್ಡಿ ಬೆಚ್ಚಗಾಗುತ್ತದೆ. ಅದೆಲ್ಲಿಂದ ಹುಟ್ಟಿ ಬರುತ್ತವೋ, ಮೀನುಗಳ ಸಾಲು ಸಾಲು ನೀರೊಳಗೆ ಯಾತ್ರೆ ಹೊರಟಿರುತ್ತವೆ. ಹುಡುಗು ಜಾತಿ, ಒಂದಿಷ್ಟು ಸಣ್ಣ ಸಣ್ಣ ಮೀನುಗಳನ್ನು ಅದು ಹೇಗಾದರೂ ಹಿಡಿದು ಮನೆಬಾವಿಗಳಿಗೆ ಬಿಡುವುದೂ ಉಂಟು,ಅಪ್ಪ ಅಮ್ಮಂದಿರ ಬೈಗುಳಗಳಿಗೂ ಬೆಲೆ ಕೊಡದೆ. ಕೆಲ ಬಾರಿ ಮೀನ ಜೊತೆ ಬಂಪರ್ ಬಹುಮಾನವಾಗಿ ಅಮೆ ಕೂಡ ಸಿಗುತ್ತದೆ ಇಲ್ಲಿ. ಅದೂ ಕೂಡ ಸೀದಾ ಬಾವಿಗೇ.

ಇಂತಹ ತೋಡುಗಳ ಪಕ್ಕದಲ್ಲಿ ನಾಲ್ಕೆಂಟು ಮಳೆಯಾಗುತ್ತಿದ್ದ ಹಾಗೆ ಯಾವು ಯಾವುದೋ ತೆರನಾದ ನೆಲಹೂ ಗಿಡಗಳ ಹಿಗ್ಗು. ಕೆಂಪು, ಹಳದಿ , ಬಿಳಿಯ ಸಾಸಿವೆ ಕಾಳಿನಾಕೃತಿಯಿಂದ ತೊಡಗಿ ಅಂಗೈ ಅಗಲದವರೆಗಿನ ಸೊಬಗುಗಳ ವರ್ಣಜಾತ್ರೆ. ಹಳ್ಳದಂಡೆಯಲ್ಲೇ ಇಡೀ ಚಳಿಗಾಲ ಬೇಸಿಗೆಗಳಲ್ಲಿ ಹುದುಗಿದ್ದ ಗಡ್ಡೆಗಳು ಜೀವತಾಳಿ,ಮೊಳಕೆ ಬಂದು ಹೂಬಿಟ್ಟು ತೋಡಂಚು ಹೂದೋಟವಾಗಿ ಬಿಡುತ್ತವೆ. ಯಾವ ದೇವರ ಮುಡಿಗೂ ಕೀಳಲ್ಪಡದ ಪುಣ್ಯ ಇವಕ್ಕೆ. ಮಳೆ ಕಡಿಮೆಯಾಗುತ್ತಿದ್ದ ಹಾಗೆ ಭೂದೇವಿಗೇ ಅರ್ಪಣೆಗೊಳ್ಳುವ ಈ ಕುಸುಮಗಳು ಮತ್ತೆ ಕಾಣಿಸಿಕೊಳ್ಳುವುದು ಮುಂದಿನ ಮಳೆಮಾಸದಲ್ಲೇ.

ಮಳೆ ಕಡಿಮೆಯಾಗಿ ಸೆಪ್ಟೆಂಬರ್ ಮುಗಿಯುತ್ತಿದ್ದ ಹಾಗೆ ಗದ್ದೆಗಳಿಗೆ ನೀರುಣಿಸುವ ಕೆಲಸವೂ ಈ ಹಳ್ಳಗಳದು. ಪುಟ್ಟ ಕಲ್ಲು- ಕಸಗಳನ್ನು ಅಡ್ಡಕಟ್ಟಿ ಗದ್ದೆಗೆ ಹರಿವು ತಿರುಗಿಸಿದರೆ, ಬಲಿಯುತ್ತಿರುವ ಭತ್ತದ ತೆನೆಗಳ ಬುಡಕ್ಕೆ ಸಾಗಿಹೋಗಿ ಅವುಗಳನ್ನು ತಂಪು ಮಾಡುತ್ತದೆ ತೋಡಿನ ನೀರು. ತನ್ನೊಳಗಿನ ಕೊನೆಯ ಹನಿಯನ್ನೂ ಕೂಡ ಗದ್ದೆಗೆ ಬಸಿದ ಮೇಲೆ ತೋಡು ಅಂತರ್ಧಾನ. ಅಮೇಲೆ, ಇದ್ದರೂ ಇಲ್ಲದ ಹಾಗಿನ ಕಷ್ಟ. ಮರಳಿ ಮಳೆಗಾಲಕ್ಕೆ ಕಾಯುತ್ತ ತಟುಕು ಹನಿಗಳು ಮತ್ತೆ ಮೈಯ ಮುಟ್ಟುವವರೆಗೆ ಸುತ್ತಲಿನ ಹಸಿರಿಗೆ ಉತ್ತರವಾಗಿ ಮಲಗಿರುತ್ತವೆ, ಈ ಚಿರಂಜೀವಿ ಹಳ್ಳಗಳು.

(ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ )

Monday, August 10, 2009

ಅಮೃತಕ್ಷಣಗಳು..

ನಮಸ್ತೇ.

ನಮ್ಮ ಕರೆಗೆ ಓಗೊಟ್ಟು , ಬಂದು ಪುಸ್ತಕ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಿದ್ದಕ್ಕೆ ನಮ್ಮ ಮತ್ತು ಪ್ರಣತಿಯ ಪರವಾಗಿ, ನಿಮಗೆಲ್ಲ, ವಂದೇ. ಇಲ್ಲಿ ಒಂದಿಷ್ಟು ಚಿತ್ರಗಳಿವೆ. ನೋಡಿ.

ಹಾ, ಬರಲಾಗದೇ ಇದ್ದ ಎಷ್ಟೋ ಜನ ಮೆಸೇಜು, ಕಾಲ್ಸು ಮತ್ತು ಈ ಮೈಲ್ ಮುಖಾಂತರ ಶುಭ ಹಾರೈಸಿದ್ದಾರೆ ಅವರಿಗೂ ನಮ್ಮ ನಮನಗಳು.


ಹೀಗೇ ನಮ್ಮ ಬೆನ್ನು ತಟ್ಟುತ್ತಿರಿ.

Monday, August 03, 2009

ಸ೦ತಸದ ಘಳಿಗೆ - ಕರೆಯೋಲೆ


ಯಾವತ್ತಾರೂ ಹೀಗಾಗತ್ತೆ ಅಂದ್ಕಂಡಿರ್ಲಿಲ್ಲ, ಹಾಂಗಾಗೇ ಬರೀಬೇಕು ಅಂತ ಗೊತಾಗ್ತಿಲ್ಲ. ಹಾಳೆಯಲ್ಲಿ ಬರಿಯೋದಾಗಿದ್ರೆ ಹಳೇ ಸಿನಿಮಾಗಳಲ್ಲಿ ನೋಡಿದ ಹಾಗೆ ಸುಮಾರು ೪೦-೫೦ ಬಿಳೀ ಕಾಗದದ ಉಂಡೆಗಳು ಇಲ್ಲಿ ನನ್ನ ಸುತ್ತ ಬಿದ್ದಿರ್ತಿದ್ವು , ಗ್ಯಾರೆಂಟಿ. ಪುಣ್ಯ,ಬ್ಲಾಗರಿನ ಬಿಳಿಯ ಅವಕಾಶ- ಅದಕ್ಕೆಲ್ಲ ಅವಕಾಶ ಕೊಡಲಿಲ್ಲ.

ನನ್ನ ಕವವ ಸಂಕಲನ, ಹೂವು ಹೆಕ್ಕುವ ಸಮಯ ಅಗಸ್ಟ್ ೯ರ ಶ್ರಾವಣ ಭಾನುವಾರ ಬಿಡುಗಡೆಯಾಗ್ತಿದೆ. ಜೋಗಿ ಸರ್ ಮುನ್ನುಡಿ ಬರೆದ ಪುಸ್ತಕವನ್ನು ನಾನು ಬೆರಗುಗಣ್ಣುಗಳಿಂದ ಆರಾಧಿಸುವ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಲೋಕಾರ್ಪಣೆ ಮಾಡುತ್ತಿದ್ದಾರೆ.

ಜೊತೆಗೆ ಅಂದೇ, ಗೆಳೆಯ ಸುಶ್ರುತನ ಹೊಳೆಬಾಗಿಲು ಲಲಿತ ಪ್ರಬಂಧ ಸಂಕಲನ ಬಿಡುಗಡೆಯಾಗ್ತಿದೆ. ಅದನ್ನ ಬಿಡುಗಡೆ ಮಾಡೋರು ನಾಗತಿಹಳ್ಳಿ ಚಂದ್ರಶೇಖರ್ ಸರ್.

ನಮ್ಮದೇ ಸಂಸ್ಥೆ ಪ್ರಣತಿ ಇಬ್ಬರ ಪುಸ್ತಕಗಳನ್ನೂ ಪ್ರಕಟಿಸಿದೆ. ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡೋ ಪುಸ್ತಕ ಪ್ರಕಟಣೆ ಯೋಜನೆಯಲ್ಲಿ ನಮ್ಮ ಪುಸ್ತಕಗಳು ಆಯ್ಕೆಯಾದ್ದವು.

ನಾನು, ಸುಶ್ ಮತ್ತು ಪ್ರಣತಿಯ ಗೆಳೆಯರೆಲ್ಲ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ಬರುವ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ ನಿಮಗಾಗಿ ಕಾಯುತ್ತಿರುತ್ತೇವೆ.

ಬಂದು ನಮ್ಮನ್ನು ಖುಷಿಗೊಳಿಸುತ್ತೀರಿ ನೀವು. ಗೊತ್ತು ನಮಗೆ:)

Tuesday, July 28, 2009

ಜಂಗಮ ಬಿಂಬಗಳು -5

ಕಾಫಿ ಹುಡುಗ ತಪ್ಪಿ ಕಪ್ ಕೆಳಗೆ ಬೀಳಿಸಿದ. ಯಾರೂ ನೋಡಿಲ್ಲವೆಂದುಕೊಂಡು ಅದೇ ಲೋಟಕ್ಕೆ ಕಾಫಿ ಬಗ್ಗಿಸಿದ. ಯಾಕಯ್ಯ ಹೀಗೆ ಮಾಡುತ್ತೀ,ತಪ್ಪಲ್ಲವ ಅಂದೆ. ಏನಾಗತ್ತೆ ಸರ್, ಜಸ್ಟ್ ಕೆಳಗೆ ಬಿತ್ತು.. , ನೀವೇ ಮಾಡ್ಕಂಡ್ರೆ ತಪ್ಪಿಲ್ಲ, ನಾವಾದ್ರೆ.. ಮಾತು ತುಂಡರಿಸಿ, ಬೇರೆ ಕಪ್ ತೆಗಿ ಅಂದೆ. ಬೇರೆ ಕಾಫಿ ಕೊಟ್ಟ. ರಾತ್ರಿ ಮನೆಯಲ್ಲಿ ಕುಕ್ಕರಿಂದ ಅನ್ನ ಎತ್ತಿ ಕೆಳಗಿಡಬೇಕಾದಾಗ, ಇಕ್ಕಳ ಜಾರಿ ಅನ್ನದ ಪಾತ್ರೆ ಕವುಚಿ ಬಿತ್ತು. ಪಾತ್ರೆ ಎತ್ತಿಟ್ಟು, ನೆಲಕ್ಕೆ ತಾಕದೇ ಉಳಿದಿದ್ದ ಅನ್ನ ಮತ್ತೆ ಪಾತ್ರೆ ಹಾಕಿದೆ. ಊಟ ಮಾಡಿದೆ. ಹುಡುಗ ನೆನಪಾದ.

***

ಎದುರಿನ ಬೈಕಿನ ಸೈಡ್ ಸ್ಟ್ಯಾಂಡು ಹೊರ ಚಾಚಿದ್ದನ್ನೇ ಗಮನಿಸುತ್ತ ಅದನ್ನು ಅವನಿಗೆ ಹೇಳಬೇಕೆಂದುಕೊಂಡ.ಆದರೆ ತನ್ನೆದರು ಸಡನ್ನಾಗಿ ನುಗ್ಗಿ ಬರುತ್ತಿದ್ದ ಆಟೋ ಗಮನಿಸಲೇ ಇಲ್ಲ.

***
ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು.೪-೫ರ ವಯಸ್ಸಿನವರು. ಪಾಪುವೊಂದು ಹೇಗೆ ಬೌಲಿಂಗು ಮಾಡಿದರೂ ಒಬ್ಬ ಪೋರ ಔಟೇ ಆಗುತ್ತಿರಲಿಲ್ಲ. ಈ ಪಾಪಚ್ಚಿ, ಮಧ್ಯರಸ್ತೆಯಲ್ಲೇ ಶರಟಿನ ಬಟನ್ನನ್ನು ಪುಟ್ಟ ಬೆರಳುಗಳಿಂದ ಬಿಚ್ಚಿ, ಬರಿ ಮೈಲಿ ನಿಂತು, ಆಕಾಶ ನೋಡುತ್ತ, ದೇವಲೇ ಇವುನ್ನ ಔಟ್ ಮಾದೂ ಅಂತ ಕೂಗಿತು. ನಂಗೇ ನಾನೇ ದೇವರಾಗಿರಬಾರದಿತ್ತೇ ಅಂತ ಮೊದಲ ಸಲ ಅನ್ನಿಸಿತು.

***